ಕನಕಗಿರಿ ಜೈನ ಕ್ಷೇತ್ರವು ಚಾಮರಾಜನಗರ ಜಿಲ್ಲೆಯಲ್ಲಿದೆ. ಇಲ್ಲಿ ಅತಿ ಪ್ರಾಚೀನವಾದ ವಿಜಯ ಪಾರ್ಶ್ವನಾಥ ತೀರ್ಥಂಕರರ ಜಿನಾಲಯವಿದೆ. ಜೊತೆಗೆ ಶ್ರೀ ಪದ್ಮಾವತಿ ದೇವಿ ಹಾಗೂ ಕೂಷ್ಮಾಂಡಿನಿ ದೇವಿಯವರ ವಿಗ್ರಹವನ್ನು ಎದುರು ಬದುರು ಪ್ರತಿಷ್ಠಾಪಿಸಿರುವುದು ಇಲ್ಲಿನ ವೈಶಿಷ್ಠ್ಯ. ಕಾಳಸರ್ಪದೋಷ ಹೊಂದಿರುವವರು ಇಲ್ಲಿ ಪೂಜೆ ಮಾಡಿಸುವುದರಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಜಿನಾಲಯದ ದರ್ಶನಕ್ಕೆ ಬೆಟ್ಟವನ್ನು ಹತ್ತಿ ಹೋಗಬೇಕಾಗುತ್ತದೆ. ಬೆಟ್ಟದಲ್ಲಿಯೇ ೨೪ ತೀರ್ಥಂಕರರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಜೈನಮಠವೂ ಸಹ ಇದ್ದು, ಈಗಿನ ಪೀಠಾಧಿಪತಿಗಳು ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ಇವರು ವಿದ್ವತ್‌ಪೂರ್ಣರಾಗಿದ್ದು, ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನೂ,ಅನಾಥಾಲಯವನ್ನು ನಡೆಸುತ್ತಿದ್ದಾರೆ. ಜೈನಮಠದಲ್ಲಿ ತಂಗಲು ವಸತಿಯ ವ್ಯವಸ್ಥೆಯೂ ಸಹ ಇದೆ. ಕನಕಗಿರಿಯನ್ನು ಜಿಲ್ಲಾ ಕೇಂದ್ರವಾದ ಚಾಮರಾಜನಗರದಿಂದ ಹಾಗೂ ಮೈಸೂರಿನಿಂದಲೂ ತಲುಪಬಹುದು. ಹರವೆ-ಮಲೆಯೂರು ಎನ್ನುವುದು ಕನಕಗಿರಿ ಕ್ಷೇತ್ರದ ಊರಿನ ಹೆಸರು. ಹಿಂದೆ ಯಾವುದೇ ವ್ಯವಸ್ಥೆಯಿಲ್ಲದೇ ಶಿಥಿಲಾವಸ್ಥೆಯಲ್ಲಿದ್ದ ಕ್ಷೇತ್ರವು, ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪೀಠಾಧಿಪತಿಗಳಾದನಂತರ ಯಶಸ್ಸನ್ನು ಕಾಣುತ್ತಿದೆ.